April 2, 2018

ಲಂಕಾದಹನ


ಲಂಕಾ ಪಟ್ಟಣ ತುಂಬಾ ಸುಂದರ ವಾಗಿತ್ತು . ಮನೆಗಳಿಗೆ  ಚಿನ್ನದ ತರ ಕಾಣೋ ಹಾಗೆ  ಬಣ್ಣ ಹಚ್ಚಿದ್ರು .
ಅರಮನೆಗಳಂತೂ  ತುಂಬಾ ಚೆಂದ ಚೆಂದ ಇದ್ವು . 
ಹನುಮಂತ ಒಂದು ಕೋತಿ ರೂಪದಲ್ಲಿ  ಆ ಅರಮನೆಗಳನ್ನೆಲ್ಲ ಮುಂಚೆ ಹುಡುಕದ . ಅಲ್ಲೆಲ್ಲೂ ಸೀತೆ ಕಾಣಿಸಲಿಲ್ಲ . 

ಹಾಗೆ  ಹುಡುಕ್ತಾ ಹುಡುಕ್ತಾ  ಅಶೋಕ ವನದ ಹತ್ರ ಬಂದ .

"ಅದೆನಜ್ಜಿ  ಅಶೋಕ ವನ?  "

"ಅದು ಕಬ್ಬನ್ ಪಾರ್ಕ್, ಲಾಲ್ ಬಾಗ್ ತರ ನೇ ದೊಡ್ಡ ಗಾರ್ಡನ್ ಕಣೆ.   ಅಲ್ಲಿ ಒಂದು ದೊಡ್ಡ ಮರದ ಕೆಳಗೆ ಒಬ್ಬ ಚೆಂದದ ಹೆಂಗಸು ಕಾಣಿಸಿದಳು  ಹನುಮಂತಂಗೆ . ಅಳ್ತಾ ಕೂತಿರೋ  ಅವಳ ಸುತ್ತ   ಸುಮಾರು ಜನ ಹೆಂಗಸರಿದ್ರು . ಆದರೆ ಆ ಹೆಂಗಸು  ಬೇರೆ ಯಾರತ್ರನೂ ಮಾತಾಡದೆ ಇರೋದನ್ನ ನೋಡಿ  ಅವಳೇ ಸೀತೆ ಇರಬೇಕು ಅಂದ್ಕೊಂಡ . ಅವಳು ಕೂತಿರೋ ಮರದ ಕೊಂಬೆ ಮೇಲೆ  ಅಡಗಿ ಕೂತ್ಗೊಂಡು ನೋಡ್ತಾ ಇದ್ದ . 

" ಅವಳೇ ಸೀತೆ  ಗ್ಯಾರಂಟಿ ಆಲ್ವಾ ಅಜ್ಜಿ? ಅವಳಿಗೆ ಭಾಷೆ ಬರ್ತಾ ಇರಲಿಲ್ಲವಲ್ಲಾ ಅದಕೆ ಯಾರತ್ರು ಮಾತಡ್ತಿರಲಿಲ್ಲ ಅವಳು . ಆಲ್ವಾ ಅಜ್ಜಿ ? "   ಅಪೂರ್ವಾ ಮುಖ ಅರಳಿತ್ತು .

"ಈಗ ಮೊಬೈಲ್ ನಲ್ಲಿ ಟ್ರಾನ್ಸ್ ಲೇಟರ್ ಹಾಕೊಂಡ್ರೆ ಯಾವ್ ಭಾಷೆ ಬೇಕಾದ್ರೂ ಅರ್ಥ ಮಾಡ್ಕೊಬಹುದು !  ಅದ್ಕೆ  ಟೆಕ್ನಾಲಜಿ  ಬೇಕು ಅನ್ನೋದು .. " ವರುಣ್  ಇನ್ನೂ ಏನೋ ಹೇಳ್ತಾ ಇದ್ದ . ಆದರೆ ಅಜ್ಜಿ ಗಮನ ಕೊಡದೆ ಮುಂದುವರೆಸಿದರು .

"ಹ್ಞೂ ಕಣೆ .  ಅಷ್ಟೊತ್ತಿಗೆ ಅಲ್ಲಿಗೆ   ರಾವಣ  ಬಂದ .  ಸೀತೆ  ಎದುರು ನಿಂತು " ನೋಡು ನೀನೆಷ್ಟೇ ಅತ್ತು ಕರೆದು  ಮಾಡಿದ್ರೂ, ಉಪವಾಸ ಇದ್ರೂ  ಏನೂ ಆಗಲ್ಲ ! ನಿನ್ನ ರಾಮ ಇಲ್ಲಿ ಬರೋದು ಸಾಧ್ಯ ನೇ ಇಲ್ಲ .  ಅವನು ಬಂದರೂ ಕೂಡ ನನ್ನ ಸೈನ್ಯದ ಎದುರು ಅವನಿಗೆ  ಗೆಲ್ಲೋಕೆ ಆಗಲ್ಲ . ಹೀಗಾಗಿ ಸುಮ್ನೆ  ನಾ ಹೇಳಿದ್ದು ಕೇಳು . ಈ ಹಠ ಎಲ್ಲ ಬಿಟ್ಟು ನನ್ನ ಮದ್ವೆ ಆಗಿ ರಾಣಿ ತರಾ ಸುಖವಾಗಿರು " ಅಂದ .

"ಆದ್ರೆ , ಸೀತೆ ಗೆ ಆಲ್ ರೆಡಿ  ಮದ್ವೆ ಆಗಿದ್ಯಲ್ಲ ಅಜ್ಜಿ ?  ಮತ್ತೆ ? "
" ಹೌದಮ್ಮ , ಆದ್ರೆ ರಾವಣ ಅದೆಲ್ಲ ವಿಚಾರ ಮಾಡ್ತ ಇರ್ಲಿಲ್ಲ . ಅವನು ಹೀಗೆ ಹೇಳ್ತಾ ಇದ್ರೆ ಸೀತೆ  ಅವನ ಕಡೆ ನೋಡಲೂ ಇಲ್ಲ . ನೆಲದ ಮೇಲೆ ಬಿದ್ದಿದ್ದ ಒಂದು ಹುಲ್ಲು ಕಡ್ಡಿ  ಕಡೆ ನೋಡ್ತಾ "  ನೋಡು ನೀನು  ಎಷ್ಟೇ ಪ್ರಯತ್ನ ಮಾಡಿದ್ರೂ  ನಾನು ನಿನ್ನ ಮಾತನ್ನು ಒಪ್ಪೋದು ಸಾಧ್ಯ ಇಲ್ಲ . ನನ್ನ ಕದ್ಕೊಂಡು ಬಂದು ತುಂಬಾ ದೊಡ್ಡ ತಪ್ಪು ಮಾಡಿದೀಯಾ. ನನ್ನ ರಾಮ ಬಂದೆ ಬರ್ತಾನೆ . ನಿನ್ನ ಕೊಂದು , ನನ್ನ ಇಲ್ಲಿಂದ ಕರ್ಕೊಂಡು ಹೋಗ್ತಾನೆ . ಆ ಭರವಸೆ ನನಗಿದೆ  "  ಅಂತ ಹೇಳಿದಳು . ಅದನ್ನ ಕೇಳಿ ರಾವಣ ಸಿಟ್ಟು ಮಾಡ್ಕೊಂಡು  ಹೊರಟು ಹೋದ .

ರಾತ್ರಿ  ಸೀತೆ ನಾ  ಕಾಯ್ತಾ ಇರೋ ಹೆಂಗಸರೆಲ್ಲ  ಮಲಗೊವರೆಗೂ  ಹನುಮಂತ  ಕಾದಿದ್ದು ,  ಆಮೇಲೆ  ಸೀತೆಯ ಎದುರು ಹೋಗಿ ನಿಂತ .
ಹೆದರಿದ ಅವಳು ,  ಇವನು ಯಾರೋ ರಾಕ್ಷಸನೇ  ಕೋತಿ ತರ ಬಂದಿದಾನೆ ಅಂದ್ಕೊಂಡಳು. 
ಅವಳ ಮುಂದೆ ನಿಂತ  ಹನುಮಂತ ತನ್ನ ಕೈಲಿರೋ  ರಾಮನ ಉಂಗುರ ನಾ  ಅವಳೆದುರು ಹಾಕಿ  ಕೈಮುಗಿದ . ಅದನ್ನು ನೋಡ್ತಿದ್ದ ಹಾಗೆ  ಸೀತೆ  ಕಣ್ಣಲ್ಲಿ ನೀರು ಬಂತು. 
ಉಂಗುರನಾ  ಎತ್ಕೊಂಡು  ಯಾರು ನೀನು ?  ಇದು ನಿನ್ ಹತ್ರ ಹೇಗ್ ಬಂತು ?  ಅಂತ ಕೇಳಿದಳು . 
"ತಾಯಿ , ನಾನು ಹನುಮಂತ .  ನಿನ್ನನ್ನ ಹುಡುಕಿಕೊಂಡು ಬರ್ತೀನಿ  ಅಂತ ಶ್ರೀರಾಮನಿಗೆ  ಮಾತು ಕೊಟ್ಟು ಬಂದಿದೀನಿ. ಅವನು ಈಗ ಕಿಷ್ಕಿಂಧೆಲಿ ಇದ್ದಾನೆ. ನಿನ್ನನ್ನು ನೋಡಿ ನಂಗೆ ತುಂಬಾ ಸಮಾಧಾನ ಆಯ್ತು. ನೀನು  ನನ್ನ ಭುಜದ ಮೇಲೆ ಕೂತ್ಕೋ ನಾನು ಸೀದಾ ರಾಮನ ಹತ್ತಿರ ನಿನ್ನನ್ನು ಕರ್ಕೊಂಡು ಹೋಗ್ತೀನಿ "  ಅಂತ ಹೇಳಿದ .

ಅದಕ್ಕೆ ಸೀತೆ ,  " ಹನುಮಂತಾ, ನಂಗೆ ಇದನ್ನ ಕೇಳಿ ತುಂಬಾ ಖುಷಿ ಆಯ್ತು. ಆದ್ರೆ ಶ್ರೀ ರಾಮನೇ  ಬಂದು  ಈ ರಾವಣನ ಕೊಂದು ನನ್ನ ಇಲ್ಲಿಂದ ಕರ್ಕೊಂಡು ಹೋಗ್ಬೇಕು . ಅದೇ ಸರಿ ! " ಅಂತ ಹೇಳಿದಳು .
ಈಗ ನೀನು ನನ್ನನ್ನು ಭೇಟಿಯಾದೆ  ಅಂತ  ಈ ಆಭರಣ ಣ ರಾಮನಿಗೆ ಕೊಡು "  ಅಂತ  ತನ್ನ ತಲೇಲಿ ಇದ್ದ ಒಂದು ಚಿನ್ನದ ಹೂವನ್ನ  ಹನುಮಂತನಿಗೆ  ಕೊಟ್ಟಳು . 

"ಅಜ್ಜಿ , ಅಜ್ಜಿ ಅವಳತ್ರ ಚಿನ್ನದ ಹೂ ಹೇಗ್  ಬಂತು ? ಮನೆಯಿಂದ ಹಾಕ್ಕೊಂಡೆ ಬಂದಿದ್ಲಾ?  ಅದನ್ನ ಯಾರೂ ಕಿತಗೊಂಡೇ ಇಲ್ವಾ?"  ಅಪೂರ್ವಾ ಪ್ರಶ್ನೆ !

"ಅವಳ  ಜಡೆ ಲೆ ಇತ್ತು ಕಣೆ . ಅದನ್ನೆಲ್ಲ ಹಾಗೆ ಯಾರೂ ಕಿತ್ಗೋತಿರಲಿಲ್ಲ. " ಜಾಸ್ತಿ ವಿವರಣೆ ಕೊಡೋಕೆ ಹೋಗದೆ ಅಜ್ಜಿ ಮುಂದುವರಿಸಿದರು .
ಸರಿ ಅದನ್ನ ತೊಗೊಂಡು  ಹನುಮಂತ  ಅವಳಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟ .  ಸುಮ್ನೆ ಯಾಕೆ ಹೋಗೋದು ಸ್ವಲ್ಪ ಕೀಟಲೆ ಮಾಡೋಣ ಅನಿಸ್ತು ಅವನಿಗೆ.  ಅಶೋಕವನ ಅಂದ್ರೆ ರಾವಣನಿಗೆ ತುಂಬಾ ಪ್ರೀತಿ ಅಂತ  ಗೊತಾಗಿತ್ತು ಅವನಿಗೆ.  ಹೀಗಾಗಿ , ಅದನ್ನ ಹಾಳು ಮಾಡೋಕ್ ಶುರು ಮಾಡಿದ.  ಹೂವೆಲ್ಲ  ಕಿತ್ತು, ಮರ-ಗಿಡಗಳನ್ನೆಲ್ಲ  ಮುರಿದು  ಹಾಳು ಮಾಡಿದ. 

"ಅಜ್ಜಿ, ಅದನ್ನೆಲ್ಲ ಯಾಕೆ ಹಾಳು ಮಾಡೋದಜ್ಜಿ ? ಪಾಪ ಅವೇನು ಮಾಡಿದ್ವು ? ಹಾಗೆಲ್ಲ ಗಿಡ ಹಾಳು ಮಾಡಬಾರದು ಅಂತ  ಅಮ್ಮ ಬೈತ ಇರ್ತಾಳೆ. "

ಹೂ ಕಣೆ. ಅವನು ಮಾಡಿದ್ದು ತಪ್ಪೇ. ಆದರೆ ಅವನಿಗೆ ರಾವಣನ ಹತ್ರ ಹೋಗೋಕೆ ಕಾರಣ ಬೇಕಿತ್ತು.  ಇದೆಲ್ಲ ನೋಡಿ ಸೈನಿಕರು  ಅವನ್ನ ಹಿಡಿದು ರಾವಣನ ಎದುರು ನಿಲ್ಸಿದ್ರು. 

ತನ್ನ ಪ್ರೀತಿಯ ಅಶೋಕವನವನ್ನು  ಹಾಳುಮಾಡಿದ ಅಂತ  ರಾವಣಂಗೆ ತುಂಬಾ ಕೋಪ ಬಂದಿತ್ತು . ಹನುಮಂತನನ್ನು ನೀ ಯಾರು? ಎಲ್ಲಿಂದ ಬಂದೆ? ಅಶೋಕವನನಾ ಯಾಕೆ ಹಾಳುಮಾಡಿದೆ ಅಂತೆಲ್ಲ  ಕೇಳಿದ . 
ಹನುಮಂತ , ತಾನು ರಾಮನ ಕಡೆಯವನು , ಸೀತೇನ ಹುಡುಕ್ಕೊಂಡು ಬಂದಿದೀನಿ , ಅವಳಿಗೆ ಏನೂ ತೊಂದ್ರೆ ಕೊಡದೆ ವಾಪಸ್ ಕಳಿಸಿಕೊಡು , ಇಲ್ಲಾಂದ್ರೆ ,ರಾಮ  ಯುದ್ಧ ಮಾಡಿ ನಿನ್ನ ಸಾಯಿಸ್ತಾನೆ  ಅಂತ ಹೇಳಿದ . 
ಅದಕ್ಕೆ ರಾವಣ ಜೋರಾಗಿ ನಕ್ಕು , ನಿನಗೆ ನನ್ನತ್ರ ಹೀಗೆ ಮಾತಾಡೋ ಅಷ್ಟು ಧೈರ್ಯನಾ  ಅಂತ  ಬೈದು , ತನ್ನ ಸೇವಕರಿಗೆ  ಹನುಮಂತನ ಬಾಲಕ್ಕೆ ಬೆಂಚಿ ಹಚ್ಚಿ  ಕಳಿಸೋಕೆ ಹೇಳಿದ . 

ರಾವಣನ ಸೇವಕರು  ಬಾಲಕ್ಕೆ ಬೆಂಚಿ ಹಚ್ಚಬೇಕು  ಅಂತ ಬಂದಾಗ , ಹನುಮಂತನ ಬಾಲ ಉದ್ದ ಬೆಳಿತಾ ಹೋಯ್ತು ! 

"ಅಜ್ಜಿ,  ಅದು ಹ್ಯಾಗೆ ಅಜ್ಜಿ ?  ಅದೇನು  ಗಿಡ -ಬಳ್ಳಿ ತರ ನ? ಬೆಳಿಯೋಕೆ ?  " ಆದಿತ್ಯ ಕೇಳಿದ 

" ಏಯ್ , ಒಂಥರಾ ಎಲಾಸ್ಟಿಕ್ ಆಗಿರಬೇಕು ಕಣೋ " ಜೋರಾಗಿ ನಕ್ಕು ಹೇಳಿದ ವರುಣ್  ತಕ್ಷಣ ಅಜ್ಜಿ ಕೋಪದ ನೆನಪಾಗಿ  "ಸಾರಿ ಅಜ್ಜಿ ಅಂತ ಸುಮ್ಮನಾದ. 

" ಅಜ್ಜಿ, ನಾನು ಇದನ್ನ ನೋಡಿದೀನಿ ಟಿವಿ ಲಿ "  ಎಕ್ಸೈಟ್ ಆಗಿ ಅಪೂರ್ವ ಹೇಳಿದಳು ."  ಬಾಲಕ್ಕೆ ಬೆಂಕಿ ಹಚ್ಚಿಕೊಂಡು  ಹನುಮಂತ .... " ಮುಂದುವರೀತಾ ಇತ್ತು 

" ಸುಮ್ನಿರೆ ,ಅಜ್ಜಿನೆ ಹೇಳ್ಲಿ . ನೀನು ಟಿ ವಿ ಲಿ ನೋಡಿದ್ದು ಈಗ ಹೇಳಬೇಡ "   ತಂಗಿಗೆ  ಗದರಿದ ಆದಿತ್ಯ 
" ಹ್ಮಂ...  ಹನುಮಂತನ ಬಾಲ  ಬೆಳಿತಾ ಹೋಯ್ತು !  ಲಂಕೆಲಿ ಇರೋ ಬಟ್ಟೆನೆಲ್ಲ ಸುತ್ತಿದರು ಮುಗೀಲಿಲ್ಲ .ಅವರು ಎಷ್ಟು ಸುತ್ತೊಕಾಯ್ತೋ ಸುತ್ತಿ ಹಾಗೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು .  ಹನುಮಂತ ಅಲ್ಲಿಂದ ಹೊರಗೆ ಹಾರಿದ . ಲಂಕೆಯಲ್ಲಿರೋ  ದೊಡ್ಡ ದೊಡ್ಡ ಮನೆಗಳ ಮೇಲೆಲ್ಲಾ ಹಾರಿ ಎಲ್ಲಾ ಕಡೇ ಬೆಂಕಿ ಹಚ್ಚಿ ಬಿಟ್ಟ . ಇಡೀ ಲಂಕಾ ಪಟ್ಟಣ ನೆ  ಉರಿಯೋಕೆ ಶುರುವಾಯ್ತು !  " 

"ಅಜ್ಜಿ ,  ಯಾಕಜ್ಜಿ ಅವನು ಹಾಗೆ ಮಾಡ್ಬೇಕು ?  ರಾವಣ ತಪ್ಪು ಮಾಡಿದ್ದು ತಾನೇ ? ಅವನ ಅರಮನೆ ಮಾತ್ರ ಸುಡ ಬೇಕಿತ್ತು . ಪಾಪ ಬೇರೆವ್ರೆಲ್ಲ ಅವರ ಮನೆ ಸುಟ್ಟು ಹೋದ್ರೆ   ಏನ್ ಮಾಡ್ತಾರೆ ?  ಇದು ಸರಿ ಅಲ್ಲ ಅಜ್ಜಿ  "   ಅಪೂರ್ವಾ  ಅಳು ಧ್ವನಿಲಿ ಹೇಳಿದಳು . 

" ಹಾಗೆ ಮಾಡಿದ್ರೆ , ರಾವಣ ತನ್ನ ತಪ್ಪನ್ನ ತಿದ್ಕೊಬಹುದು ಅಂತ ಆಗಿತ್ತಮ್ಮ ಅದು . ಬಿಡು ನಾವೇನು ಮಾಡೋಕಾಗಲ್ವಲ್ಲ ಈಗ . ನೀ ಮುಂದೆ ಕಥೆ ಕೇಳು . ಅಜ್ಜಿ ಮೊಮ್ಮಗಳನ್ನು ಸಮಾಧಾನ ಮಾಡಿದರು . 
" ಲಂಕಾ ಪಟ್ಟಣ ಕ್ಕೆ ಬೆಂಕಿ ಹಚ್ಚಿದ  ಹನುಮಂತ  ತನ್ನ ಬಾಲನ ಸಮುದ್ರದಲ್ಲಿ ಅದ್ದಿ ಬೆಂಕಿ ಆರಿಸ್ಕೊಂಡ . 
ಆಮೇಲೆ , ಅಲ್ಲಿಂದ ಪುನಃ ಜಿಗಿದು ಕಿಷ್ಕಿಂಧೆಗೆ ವಾಪಸ್ ಹೋದ.  "

" ಅಜ್ಜೀ , ಅವನ ಬಾಲ ಸುಟ್ಟು ಹೋಗಲಿಲ್ವಾ ? ಉರಿಲೂ ಇಲ್ವಾ ಅವನಿಗೆ?  ನಂಗೆ ಬೆಳಿಗ್ಗೆ ಅಮ್ಮ ಹಾಲಿನ ಲೋಟ ಕೊಟ್ಳಲ್ಲ , ಅದರಲ್ಲಿ ಕೆನೆ ಸರಿಸೋಕೆ  ಹೋದೆ , ಬೆರಳು  ಸುಟ್ಟೋಗಿ ಇನ್ನೂ ಉರಿತಾ ಇದೇ ... " 

" ಸುಮ್ನಿರೇ ,ಉಗುರು ಬೆಚ್ಚಗೆ ಕೂಡ ಇರ್ಲಿಲ್ಲ ಹಾಲು , ಬೆರಳು ಸುಡ್ತಂತೆ " ಸ್ಮಿತಾ ಸಿಡುಕಿದಳು 
" ನಿಂಗೊತ್ತಿಲ್ಲ ಸುಮ್ನಿರು  ಎಂದು ಅಮ್ಮನಿಗೆಮೂತಿ ತಿರುವಿದ ಅಪೂರ್ವಾ " ಅಜ್ಜೀ , ಮುಂದೆ ಹೇಳು "  ರಾಗ ಎಳೆದಳು.
" ವಾಪಸ್ ಬಂದ ಹನುಮಂತ  ಸೀದಾ ರಾಮನ ಹತ್ತಿರ ಹೋದ . ಅವನಿಗೆ ನಮಸ್ಕಾರ ಮಾಡಿ  ಸೀತೆಯ ವಿಷಯವನ್ನೆಲ್ಲ ಹೇಳಿದ . ಹಾಗೆ ಅವಳು ಕೊಟ್ಟಿದ್ದ ಚೂಡಾಮಣಿ ನು ರಾಮನಿಗೆ ಕೊಟ್ಟ .ಅದನ್ನು ನೋಡಿ , ಸೀತೆ ಅಳ್ತಾ ಇರೋ ಸುದ್ದಿನೆಲ್ಲ ಕೇಳಿ ರಾಮನಿಗೂ ಅಳು ಬಂದು ಬಿಡ್ತು .  " 

" ಪಾಪ ಆಲ್ವಾ ಅಜ್ಜಿ? ನಂಗೂ ಅಳು ಬರ್ತಿದೆ . ಹನುಮಂತ ಲಂಕೆನೆಲ್ಲ ಸುಟ್ಟಾಕಿದ ಅಂತ ಕೋಪಕ್ಕೆ ರಾವಣ ಸೀತೆ ನ ಸಾಯಿಸಿ ಬಿಟ್ರೆ ? " 

" ಹೇಯ್ ಅಳುಬುರ್ಕಿ , ಆ ತರ ಏನೂ ಆಗಲ್ಲ. ಸುಮ್ನೆ ಕಥೆ ಕೇಳೆ"  ವರುಣ್ ಬೈದ . 
" ರಾಮ -ಲಕ್ಷ್ಮಣ ಇಬ್ರೂ ಸುಗ್ರೀವನ ಹತ್ರ ಮಾತಾಡಿ ,  ಲಂಕೆಗೆ ಯುದ್ಧಕ್ಕೆ ಹೋಗೋದು ಅಂತ  ತೀರ್ಮಾನ ಮಾಡಿದ್ರು . ಒಂದೇ  ದೊಡ್ಡ ತೊಂದ್ರೆ ಅಂದ್ರೆ ಸಮುದ್ರ ದಾಟೋದು !  ಆ ಬಗ್ಗೆನೇ ಯೋಚನೆ ಮಾಡ್ತ  ಸಮುದ್ರ ತೀರದ ವರೆಗೂ ಹೋದ್ರು .


 ಹಿಂದಿನ ಕಂತುಗಳು 




2 comments:

Unknown said...

Dear Chitra
New "Lankayana" very good writing skill.
Get going ,
with best wishes
Vijay

sunaath said...

ರಾಮಾಯಣವನ್ನು ಮತ್ತೊಮ್ಮೆ ಓದುವಾಗ, ನಾನು ಹುಡುಗನೇ ಆಗಿ ಬಿಡುತ್ತೇನೆ. ಆದರೆ, ಇಲ್ಲಿರುವ ಅಜ್ಜಿಯ ಮೊಮ್ಮಕ್ಕಳು ಕೇಳುವ ಪ್ರಶ್ನೆಗಳನ್ನು ನೋಡಿದಾಗ, ವಿನೋದವೆನಿಸುತ್ತದೆ. ದಯವಿಟ್ಟು ಮುಂದುವರೆಸಿ.