ಇಬ್ರೂ ಗಾಬರಿಯಿಂದ ಬೇಗ ಬೇಗ ಮನೆ ಹತ್ರ ಬಂದ್ರು. ಆದರೆ ಅಲ್ಲಿ ಸೀತೆ ಇರಲೇ ಇಲ್ಲ.......
ಅಜ್ಜಿ , ಈಗೇನ್ ಮಾಡಿದ್ರು ರಾಮ -ಲಕ್ಷ್ಮಣ? ಅಲ್ಲಿ ಕಾಡಲ್ಲಿ ಪೊಲೀಸ್ ಸ್ಟೇಶನ್ ಇತ್ತ? ಕಂಪ್ಲೈಂಟ್ ಕೊಡೋಕೆ?
ಹುಡ್ಕೋದ್ ಹೇಗೆ ?
ಅಜ್ಜಿ ಅಜ್ಜಿ, ಸೀತೆ ಹತ್ರ ಮೊಬೈಲ್ ಇರ್ಲಿಲ್ವಾ ? ಅಪೂರ್ವಾ ಳ ಪ್ರಶ್ನೆ
ಅಯ್ಯೋ , ಆಗ ಫೋನ್ ಕೂಡ ಇರ್ಲಿಲ್ಲ ಕಣೆ ಇನ್ನು ಮೊಬೈಲ್ ಅಂತೆ ಗೂಬೆ ! ಅಣ್ಣ ತಂಗಿಯ ತಲೆ ಮೇಲೊಂದು ಮೊಟಕಿದ .
ಅಮ್ಮಾ .. ನೋಡು ಅಣ್ಣ ನಂಗೆ ಗೂಬೆ ಅಂತಾನೆ .. ಅವ್ನೆ ಕೋತಿ ! ಅಪೂರ್ವಾಳ ರಾಗ ಶುರುವಾಗುವ ಲಕ್ಷಣ ಕಂಡು ಅಜ್ಜಿ ನಡುವೆ ಗದರಿದರು .
ಈಗೇನ್ ಕತೆ ಕೇಳ್ತೀರಾ ಇಲ್ಲ ಕಿತ್ತಾಡ್ತೀರ?
ಸಾರಿ ಅಜ್ಜಿ , ನೀನ್ ಹೇಳು .
ಹ್ಮಂ.. ಆಗೆಲ್ಲ ಪೊಲೀಸ್ ಸ್ಟೇಶನ್ ಎಲ್ಲ ಏನು ಇರ್ಲಿಲ್ಲ . ಅದ್ಕೆ ರಾಮ ಲಕ್ಷ್ಮಣ ಇಬ್ರು ರಾವಣ ಕಾಡಲ್ಲಿ ಯಾವ ದಿಕ್ಕಿಗೆ ಹೋಗಿರಬಹುದು ಅಂದಾಜು ಮಾಡ್ಕೊಂಡು ಹುಡುಕ್ತಾ ಹೊರಟರು .
"ಅದ್ಕೆ ನೋಡು ಈಗ ಟೆಕ್ನಾಲಜಿ ಇಂದ ಎಷ್ಟು ಉಪಯೋಗ ಆಗಿದೆ ಅಂತ . ಯಾರು ಎಲ್ಲಿದ್ರೂ ಹುಡುಕಬಹುದು" ವರುಣ್ ಹೇಳಿದ ಅಜ್ಜಿಗೆ .
'ನಾನು ನಿಮ್ ಕಾಲದ ಕಥೆ ಹೇಳ್ತಿಲ್ಲ ಸುಮ್ನೆ ಕೇಳಿ' . ಅಜ್ಜಿ ಗದರಿದರು .
"ಸ್ವಲ್ಪ ದೂರ ಹೋಗೋವಾಗ .. ಅಲ್ಲಿ ಒಂದು ದೊಡ್ಡ ಹಕ್ಕಿ ರೆಕ್ಕೆ ಎಲ್ಲ ಕತ್ತರಿಸ್ಕೊಂಡು ಬಿದ್ದಿತ್ತು . ಅದನ್ನ ನೋಡಿ ಇವರಿಬ್ರು ಅದಕ್ಕೆ ಸ್ವಲ್ಪ ನೀರು ಕುಡಿಸಿ , ಏನಾಯ್ತು ಯಾರು ಹೀಂಗೆ ಮಾಡಿದ್ದು ಅಂತ ಕೇಳಿದ್ರು .
ಅದಕ್ಕೆ ಹಕ್ಕಿ , ಇವರನ್ನ ನೋಡಿ ಅದು ರಾಮ- ಲಕ್ಷ್ಮಣ ನೀವೇನಾ ಅಂತ ಕೇಳ್ತು . ಹೌದು ಅಂದಾಗ , ನಾನು ಜಟಾಯು ಅಂತ , ಸ್ವಲ್ಪ ಹೊತ್ತು ಮುಂಚೆ , ಒಂದು ಚಂದದ ಹೆಂಗಸನ್ನು ರಾವಣ ಪುಷ್ಪಕ ವಿಮಾನದಲ್ಲಿ ಕರ್ಕೊಂಡು ಹೋದ . ಅವಳು ರಾಮಾ , ಲಕ್ಷ್ಮಣಾ ಕಾಪಾಡಿ ಅಂತ ಜೋರಾಗಿ ಕೂಗ್ತಾ ಇದ್ಲು. ಅದಕ್ಕೆ ನಾನು ಸಹಾಯ ಮಾಡೋಕೆ ಹೋದೆ ಆಗ ರಾವಣ ನನ್ನ ರೆಕ್ಕೆನೆಲ್ಲ ಕತ್ತರಿಸಿ ಹಾಕ್ಬಿಟ್ಟ" ಅಂತ ಹೇಳ್ತು.
"ಅಜ್ಜಿ , ಹಕ್ಕಿಗೆ ಮಾತಾಡೋಕೆ ಬರ್ತಾ ಇತ್ತ? ಅದಕ್ಕೆ ಹೆಸರು ಯಾರು ಇಟ್ಟಿದ್ರು ? ಯಾರಾದ್ರು ಸಾಕಿ ಕೊಂಡಿದ್ದಾ ಆ ಹಕ್ಕಿ ?" -ಅಪೂರ್ವಾಳ ಪ್ರಶ್ನಾವಳಿ .
"ಆಗಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆಲ್ಲ ಮಾತಾಡೋಕೆ ಬರ್ತಿತ್ತು . ಅದಕ್ಕೆ ಹೆಸರು ಇರ್ತಾ ಇಟ್ಟು . ಅವುಗಳ ಅಪ್ಪ ಅಮ್ಮ ಇಡ್ತಾ ಇದ್ರೂ . "
" ಆದರೂ ಜಟಾಯು ಅನ್ನೋ ಹೆಸರು ಚೂರೂ ಚೆನಾಗಿಲ್ಲ ಬಿಡಜ್ಜಿ "
"ರಾಮ ಲಕ್ಷ್ಮಣ ಆ ಹಕ್ಕಿ ನ ಕೇಳಿದ್ರು , ಈ ರಾವಣ ಅಂದ್ರೆ ಯಾರು ? ಎಲ್ಲಿರ್ತಾನೆ ನಿನ್ಗೆನಾದ್ರು ಗೊತ್ತಾ" ಅಂತ
ಅಜ್ಜಿ ಮೊಮ್ಮಕ್ಕಳಿಗೆ ಮಾತಾಡುವ ಅವಕಾಶ ಕೊಡದೆ ಮುಂದುವರಿಸಿದರು .
"ಜಟಾಯು ಹೇಳ್ತು , ಇಲ್ಲಿಂದ ಸುಮಾರು ದೂರ ಸಮುದ್ರದ ನಡುವೆ ಒಂದು ತುಂಬಾ ಸುಂದರವಾಗಿರೋ ಪಟ್ಟಣ ಇದೆ . ಲಂಕಾ ಪಟ್ಟಣ ಅಂತ ಅದರ ರಾಜ ಈ ರಾವಣ.
ಹೀಗೆ ಮುಂದೆ ಹೋದ್ರೆ , ಅಲ್ಲಿ ಕಿಷ್ಕಿಂಧೆ ಅಂತ ಸಿಗತ್ತೆ ಅಲ್ಲಿ ರಾಜ ಸುಗ್ರೀವನ್ನ ಭೇಟಿ ಮಾಡಿದ್ರೆ ನಿಮಗೆ ಸಹಾಯ ಸಿಗಬಹುದು" ಅಂತ ಹೇಳಿ ಜಟಾಯು ಸತ್ತೋಯ್ತು .
"ಪಾಪ ಅಲ್ವ ಅಜ್ಜಿ ಜಟಾಯು ? ಗುರ್ತೆ ಇಲ್ದೆ ಹೋದ್ರು ಸಹಾಯ ಮಾಡೋಕೆ ಹೋಗಿ ಸತ್ತೋಯ್ತು ! "
"ಅದ್ಕೆ ಕಣೆ ಸುಮ್ ಸುಮ್ನೆ ಯಾರಿಗೂ ಹೆಲ್ಪ್ ಮಾಡೋಕ್ ಹೋಗಬಾರದು ಅನ್ನೋದು ! " ಆದಿತ್ಯ ತಂಗಿಗೆ ಹೇಳಿದ .
ಸುಮ್ಮನೆ ಕತೆ ಕೇಳ್ತಾ ಇದ್ದ ವರುಣ್ ಕೈ ಮೇಲೆತ್ತಿದ . ಪ್ರಶ್ನೆ ಕೇಳೋಕೆ .
"ಅಜ್ಜಿ , ರಾವಣ ಲಂಕಾ ಪಟ್ಟಣ ದವನು . ಅಂದ್ರೆ ಬೇರೆ ದೇಶದವನು . ಅವ್ನು ಹೆಂಗೆ ಪಾಸ್ ಪೋರ್ಟ್ , ವೀಸ ಇಲ್ದೆ ನೆ ಬಂದ? ವಿಮಾನದಲ್ಲಿ ಬೇರೆ ಬಂದಿದ್ದ ಅಂದ್ರೆ ಸೆಕ್ಯೂರಿಟಿ ಫೋರ್ಸ್ ನವರು ಏನು ಮಾಡ್ತಾ ಇದ್ರು ? ಅವನ ವಿಮಾನ ನ ಯಾಕೆ ಟ್ರ್ಯಾಕ್ ಮಾಡ್ಲಿಲ್ಲ ? "
ಅಜ್ಜಿ ಅವಕ್ಕಾದರು !
" ಅಯ್ಯೋ ..ಅಂದ್ರೆ ಆವಾಗಿಂದ ಹೀಗೆ ನಮ್ ಕಥೆ ಅಂತಾಯ್ತು ! ಯಾರು ಯಾವ್ ಬಾರ್ಡರ್ ಇಂದ ಹೇಗ ಬೇಕಾದರೂ ಒಳಗೆ ನುಗ್ಗ ಬಹುದು ಕಣೋ " - ಆದಿತ್ಯನ ಸಮಜ್ಹಾಯಿಷಿ .
ಹೋಗಿ ಹೋಗಿ ನಿಮಗೆ ರಾಮಾಯಣ ಕಥೆ ಹೇಳೋಕೆ ಶುರು ಮಾಡಿದ್ನಲ್ಲ ನನ್ ಬುದ್ಧಿ ಗಿಷ್ಟು ! ಅಜ್ಜಿ ಬೈಕೊಂಡರು.
"ಮುಂದೆ ಹೇಳು ಅಜ್ಜಿ ನೀನು . ಅವ್ರು ಕಿಷ್ಕಿಂಧೆ ಗೇ ಹೋದ್ರ? "
"ಹಾಂ . ಸುಮಾರು ದೂರ ನಡ್ಕೊಂಡು ಹೋದ ಮೇಲೆ ಅವರಿಗೆ ಕಿಷ್ಕಿಂಧೆ ಕಾಣಿಸ್ತು . ಕಿಷ್ಕಿಂಧೆ ಲಿ ಎಲ್ಲ ನಿಮ್ ತರದವ್ರೆ ಇದ್ದಿದ್ರು ! ಅದರ ರಾಜ ಸುಗ್ರೀವ ಅಂತ . "
" ಅಜ್ಜಿ , ನಮ್ ತರದವರು ಅಂದ್ರೆ? ಮಕ್ಕಳೇ ಇದ್ರಾ? "
"ಹಿ ಹಿ ಹಿ .. ಇಲ್ಲ ಕಣೆ ಬರೀ ಕೋತಿಗಳು ಅಂತ ಹೇಳಿದ್ದು "-- ಅಜ್ಜಿ ದೊಡ್ಡದಾಗಿ ನಕ್ಕರು
ಅಜ್ಜೀ ........... ಮುಖ ತಿರುವಿದಳು ಅಪೂರ್ವ .
ಅಷ್ಟರಲ್ಲಿ ಒಳಗಿಂದ ಕರೆ ಬಂತು . ಊಟ ರೆಡಿ ಎಲ್ಲ ಬೇಗ ಬನ್ನಿ ಅಂತ .
ಮಕ್ಕಳು ಎದ್ದರು . "ಅಜ್ಜಿ ಬೇಗ ಊಟ ಮಾಡ್ಕೊಂಡ್ ಬರೋಣ . ಮತ್ತೆ ಹೇಳು "
ನಡೀರಿ ಇವತ್ತಿಗೆ ಸಾಕು ಇಷ್ಟೇ. ನಂಗೂ ನಿಮಗೆ ಕಥೆ ಹೇಳಿ ಸುಸ್ತಾಗ್ತಿದೆ .
ನಾಳೆ ಮುಂದಿನ ಕಥೆ
ಅಜ್ಜಿ ಮೆಲ್ಲಗೆ ಎದ್ದರು .
ಹಿಂದಿನ ಕಂತುಗಳು :
ಹಿಂದಿನ ರಾಮಾಯಣವೂ ಇಂದಿನ ಮಕ್ಕಳೂ
ಅರಣ್ಯಕಾಂಡ
ಸೀತಾಪಹರಣ - ಪೀಠಿಕೆ
ಸೀತಾಪಹರಣ -ಭಾಗ ೨
ಹಿಂದಿನ ಕಂತುಗಳು :
ಹಿಂದಿನ ರಾಮಾಯಣವೂ ಇಂದಿನ ಮಕ್ಕಳೂ
ಅರಣ್ಯಕಾಂಡ
ಸೀತಾಪಹರಣ - ಪೀಠಿಕೆ
ಸೀತಾಪಹರಣ -ಭಾಗ ೨
2 comments:
ಪುರಾಣ ಕಥೆಗಳಿಗೆ ಆಧುನಿಕ ಬಾಲಕರ ಮನಸ್ಸು ಸ್ಪಂದಿಸುವ ಪರಿಯನ್ನು ತುಂಬ ಸ್ವಾರಸ್ಯಕರವಾಗಿ ಚಿತ್ರಿಸಿದ್ದೀರಿ!
ತುಂಬಾ ಸ್ವಾರಸ್ಯಕರವಾಗಿದೆ. ಮಕ್ಕಳ ಕಾಮೆಂಟ್ಸ್ ಅಂತೂ ಸೂಪರ್!
ಈ ಬ್ಲಾಗ್, ಈ ಕಥೆ ಓದಿ ತುಂಬಾ ಖುಷಿ ಅಯ್ತು. ರಾಮಾಯಣದ ಮುಂದಿನ ಕಂತಿಗೆ
ಕಾತುರದಿಂದ ಕಾಯುತ್ತಿರುವೆ..
Post a Comment